ನೇಚರ್ ಕನ್ಸರ್ವೇಶನ್ ಫೌಂಡೇಶನ್ ಭಾರತದಲ್ಲಿನ ಮೈಸೂರು ಮೂಲದ ಸರ್ಕಾರೇತರ ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. ಅದು ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ವಿಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ. == ಇತಿಹಾಸ == ಸಂಸ್ಥೆಯನ್ನು 1996 ರಲ್ಲಿ ಸ್ಥಾಪಿಸಲಾಯಿತು. "ವಿಜ್ಞಾನ ಆಧಾರಿತ ಮತ್ತು ಸಾಮಾಜಿಕ ಜವಾಬ್ದಾರಿಯುತ ಸಂರಕ್ಷಣೆ" ಪ್ರಸ್ತುತ ಸಂಸ್ಥೆಯ ಧ್ಯೇಯವಾಗಿದೆ. == ಚಟುವಟಿಕೆಗಳು == ಸಂಸ್ಥೆಯು ವಿವಿಧ ಆವಾಸಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮಾನವ- ವನ್ಯಜೀವಿ ಸಂಘರ್ಷಗಳು, ಚಿರತೆ ಮತ್ತು ಟಿಬೆಟಿಯನ್ ಗಸೆಲ್‌ನಂತಹ ಅಳಿವಿನಂಚಿನಲ್ಲಿರುವ ಪ್ರಾಣಿಜಾತಿಗಳ ಸಂರಕ್ಷಣೆಯ ಬಗ್ಗೆ ಈ ಸಂಸ್ಥೆಯು ಹೆಚ್ಚಿನ ಮುತುವರ್ಜಿ ವಹಿಸುತ್ತದೆ. ಜಾನುವಾರುಗಳನ್ನು ಬೇಟೆಯಾಡುತ್ತಿರುವ ಸಮುದಾಯಗಳಿಂದ ಹಿಮ ಚಿರತೆಗಳ ಹತ್ಯೆಯನ್ನು ತಡೆಗಟ್ಟಲು ಜಾನುವಾರು ವಿಮಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.ಹಿಮಾಲಯದಲ್ಲಿನ ವನ್ಯಜೀವಿಗಳ ರಕ್ಷಣೆಗಾಗಿ ಪ್ರಾಜೆಕ್ಟ್ ಟೈಗರ್‌ನಂತೆಯೇ ಪ್ರಾಜೆಕ್ಟ್ ಸ್ನೋ ಲೆಪರ್ಡ್ ಎಂಬ ಯೋಜನೆಯನ್ನು ಪ್ರಾರಂಭಿಸಲು ಸಂಸ್ಥೆಯು ಇಂಟರ್ನ್ಯಾಷನಲ್ ಸ್ನೋ ಲೆಪರ್ಡ್ ಟ್ರಸ್ಟ್ ಮತ್ತು ಭಾರತ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಪ್ರಾಜೆಕ್ಟ್ ಹಿಮ ಚಿರತೆ ಎನ್ನುವ ಯೋಜನೆಯ ಮೂಲಕ ಹಿಮಾಲಯದಲ್ಲಿರುವ ಪ್ರಾಣಿಜಾತಿಗಳ ಕುಸಿತದ ಸಮಸ್ಯೆಯನ್ನು ಸಾಕ್ಷ್ಯ ಆಧಾರಿತ ಸಂರಕ್ಷಣಾ ಯೋಜನೆಗಳು ಮತ್ತು ಸ್ಥಳೀಯ ಬೆಂಬಲದ ಮೂಲಕ ಪರಿಹರಿಸಲು ಪ್ರಯತ್ನಿಸುತ್ತದೆ. ಹಿಮ ಚಿರತೆ, ಏಷ್ಯಾಟಿಕ್ ಐಬೆಕ್ಸ್, ಅರ್ಗಾಲಿ, ಯುರಿಯಲ್, ಚಿರು, ಟಕಿನ್, ಸೆರೋವ್ ಮತ್ತು ಕಸ್ತೂರಿ ಜಿಂಕೆಗಳಂತಹ ಪ್ರಭೇದಗಳು ಈ ಯೋಜನೆಯಿಂದ ವಿಶೇಷವಾಗಿ ಪ್ರಯೋಜನ ಪಡೆಯುತ್ತವೆ. 2003 ರಲ್ಲಿ, ಸಂಸ್ಥೆಯ ಮೂವರು ವನ್ಯಜೀವಿ ಜೀವಶಾಸ್ತ್ರಜ್ಞರು ಅರುಣಾಚಲ ಪ್ರದೇಶದಿಂದ ಚೈನೀಸ್ ಗೋರಲ್ ( ನೆಮೊರ್ಹೇಡಸ್ ಕಾಡಾಟಸ್ ) ನ ಇರುವಿಕೆಯನ್ನು ದೃಢಪಡಿಸಿದರು, ಇದು ಭಾರತಕ್ಕೆ ಮೊದಲ ದಾಖಲೆಯಾಗಿದೆ. 2005 ರಲ್ಲಿ, ಸಂಸ್ಥೆಯ ವಿಜ್ಞಾನಿಗಳು ಭಾರತದ ಪಶ್ಚಿಮ ಅರುಣಾಚಲ ಪ್ರದೇಶದಲ್ಲಿ ಅರುಣಾಚಲ ಮಕಾಕ್ ಅನ್ನು ಗುರುತಿಸಿದರು, ಇದು ವಿಜ್ಞಾನಕ್ಕೆ ಹೊಸ ಸೇರ್ಪಡೆಯಾಗಿದೆ. ಸಂಸ್ಥೆಯು ಪಶ್ಚಿಮ ಘಟ್ಟಗಳ ಅನಮಲೈ ಬೆಟ್ಟಗಳಲ್ಲಿ ಮಳೆಕಾಡು ಮರುಸ್ಥಾಪನೆ ಕಾರ್ಯಕ್ರಮವನ್ನು ನಡೆಸುತ್ತಿದೆ. ಅಲ್ಲಿ ರಾಷ್ಟ್ರೀಯ ಉದ್ಯಾನವನಗಳು ಅಥವಾ ವನ್ಯಜೀವಿ ಅಭಯಾರಣ್ಯಗಳ ಹೊರಗಿನ ಮಳೆಕಾಡುಗಳ ಅಳಿದುಳಿದ ಭಾಗಗಳನ್ನು ಖಾಸಗಿ ಚಹಾ ಮತ್ತು ಕಾಫಿ ತೋಟಗಳ ಸಹಭಾಗಿತ್ವದಲ್ಲಿ ಪುನಃಸ್ಥಾಪಿಸಲಾಗುತ್ತದೆ. == ಪ್ರಶಸ್ತಿಗಳು == ಸಂಸ್ಥೆಯ ಇಬ್ಬರು ಸಂಸ್ಥಾಪಕರಾದ ಚಾರುದತ್ತ್ ಮಿಶ್ರಾ ಮತ್ತು ಎಂ.ಡಿ. ಮಧುಸೂಧನ್ ಅವರು, ಅನುಕ್ರಮವಾಗಿ ೨೦೦೫ ಮತ್ತು ೨೦೦೯ರ ವಿಟ್ಲಿ ಪ್ರಶಸ್ತಿಯನ್ನು ಪಡೆದರು. ಪ್ರಸ್ತುತ ಪ್ರಶಸ್ತಿಯನ್ನು "ಗ್ರೀನ್ ಆಸ್ಕರ್" ಎಂಬುದಾಗಿಯೂ ಕರೆಯುತ್ತಾರೆ. ಎತ್ತರದ ಭೂಪ್ರದೇಶಗಳಲ್ಲಿನ ಸಂರಕ್ಷಣಾ ಪ್ರಯತ್ನಗಳಿಗಾಗಿ ಚಾರುದತ್ತ್ ಮಿಶ್ರಾ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಪಶ್ಚಿಮ ಘಟ್ಟಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಧುಸೂಧನ್ ಅವರು ಮಾಡಿದ ಕೆಲಸವನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಅಪರಾಜಿತಾ ದತ್ತಾ ಅವರು ಹಾರ್ನ್‌ಬಿಲ್‌ಗಳ ಸಂರಕ್ಷಣೆಗಾಗಿ ತಮ್ಮ ದಶಕದ ಸುದೀರ್ಘ ಕೆಲಸವನ್ನು ಮುಂದುವರಿಸಲು 2013 ರಲ್ಲಿ ವಿಟ್ಲಿ ಪ್ರಶಸ್ತಿಯನ್ನು ಪಡೆದರು. ತನ್ನ ಜೀವನಪೂರ್ತಿ, ವನ್ಯಜೀವಿ ಜೀವಶಾಸ್ತ್ರಕ್ಕೆ ನೀಡಿದ ಕೊಡುಗೆ ಹಾಗೂ ನಾಮದಾಫಾ ಟೈಗರ್ ರಿಸರ್ವ್‌ನಲ್ಲಿ ಮಾಡಿದ ಕೆಲಸವನ್ನು ಗಮನಿಸಿ ಎನ್‌ಸಿಎಫ್‌ನ ಹಿರಿಯ ವಿಜ್ಞಾನಿ ಅಪರಾಜಿತಾ ದತ್ತಾ ಅವರಿಗೆ ನ್ಯೂಯಾರ್ಕ್ ಮೂಲದ ವಿಂಗ್ಸ್ ವರ್ಲ್ಡ್ ಕ್ವೆಸ್ಟ್ 2009 ರ ವುಮನ್ ಆಫ್ ಡಿಸ್ಕವರಿ ಹ್ಯುಮಾನಿಟಿ ಪ್ರಶಸ್ತಿಯನ್ನು ನೀಡಲಾಯಿತು.ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯಿಂದ 2010 ರಲ್ಲಿ ಉದಯೋನ್ಮುಖ ಪರಿಶೋಧಕಿಗಿರುವ ಪ್ರಶಸ್ತಿಯನ್ನು ಆಕೆಗೆ ನೀಡಲಾಯಿತು. 2015 ರಲ್ಲಿ, ಡಾ.ಆನಂದ ಕುಮಾರ್ ಅವರು ವಾಲ್ಪಾರೈ ಪ್ರಸ್ಥಭೂಮಿಯಲ್ಲಿ ಆನೆ-ಮಾನವ ಸಂಘರ್ಷ ನಿರ್ವಹಣೆಯ ಕೆಲಸಕ್ಕಾಗಿ ವಿಟ್ಲಿ ಪ್ರಶಸ್ತಿಯನ್ನು ಪಡೆದರು. 2017 ರಲ್ಲಿ, ಅವರಿಗೆ ಸಹಾಯ ನಿಧಿಯನ್ನು ಮುಂದುವರಿಸಲಾಯಿತು. ಪ್ರಕೃತಿ ಸಂರಕ್ಷಣೆಗೆ ಅತ್ಯುತ್ತಮ ಕೊಡುಗೆಗಳಿಗಾಗಿ ಸಂಸ್ಥೆಯು 2006 ರಲ್ಲಿ, ಸೊಸೈಟಿ ಫಾರ್ ಕನ್ಸರ್ವೇಶನ್ ಬಯಾಲಜಿಯಿಂದ ವಿಶಿಷ್ಟ ಸೇವಾ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸಂಸ್ಥೆಯ ಕ್ಷೇತ್ರ ಸಂಯೋಜಕರಾದ ಸುಶೀಲ್ ದೋರ್ಜೆ ಅವರು ಸ್ಪಿತಿ ಮತ್ತು ಲಡಾಖ್‌ನಲ್ಲಿನ ಮಾನವ-ವನ್ಯಜೀವಿ ಸಂಘರ್ಷದ ಕುರಿತಾದ ಅವರ ಕೆಲಸಕ್ಕಾಗಿ ವ್ಯಾನ್ ಟೈನ್‌ಹೋವನ್ ಫೌಂಡೇಶನ್ ಪ್ರಶಸ್ತಿಯನ್ನು ಪಡೆದರು. == ಬಾಹ್ಯ ಸಂಪರ್ಕ == ನ ವೆಬ್‌ಸೈಟ್ ಪರಿಸರ ತರ್ಕ, ಬ್ಲಾಗ್ 2021-12-06 ವೇಬ್ಯಾಕ್ ಮೆಷಿನ್ ನಲ್ಲಿ. ಪುನಃಸ್ಥಾಪನೆ ಯೋಜನೆಯ ಪ್ರದರ್ಶನ 2020-01-29 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==